ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ರಾಜ್ಯ ಸರ್ಕಾರ ಮತ್ತೆ ಅವಕಾಶ ನೀಡಿದ್ದಕ್ಕೆ ಬಿಜೆಪಿ ಕೆರಳಿ ಕೆಂಡವಾಗಿದೆ. ಅಲ್ಪಸಂಖ್ಯಾತರನ್ನ ಓಲೈಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ಗೆ ಅವಕಾಶ ನೀಡಿರೋದು ತಪ್ಪು. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಪೆಂಡಿಂಗ್ ಇರುವಾಗಲೇ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಿದ್ದು ಸರಿಯಲ್ಲ ಅಂತ ಬಿಜೆಪಿ ನಾಯಕರು ಹೇಳ್ತಿದ್ದಾರೆ. ರಾಜ್ಯ ಸರ್ಕಾರದ ಹಿಜಾಬ್ ಆದೇಶಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರೋಧ ವ್ಯಕ್ತಪಡಿಸಿದ್ದಾರೆ. ನಿಮಗೆ ಕೇಸರಿ ಶಾಲು ನಿಷೇಧ ಮಾಡುವ ಅಧಿಕಾರ ಕೊಟ್ಟಿದ್ದು ಯಾರು..? ಹಿಜಾಬ್ ಹಾಕಲು ಅವಕಾಶ ನೀಡಿದ್ದೀರಿ. ಇಂತಹ ಓಲೈಕೆ ರಾಜಕಾರಣ ಸರಿಯಲ್ಲ. ಕೂಡಲೇ ನಿಮ್ಮ ಆದೇಶ ಹಿಂಪಡೆಯಿರಿ ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

ಹಿಜಾಬ್ಗೆ ಅವಕಾಶ ನೀಡಿರೋ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. 3 ವರ್ಷದಿಂದ ಕಾಂಗ್ರೆಸ್ನವರು ಏನ್ ಮಾಡ್ತಿದ್ರು..? ಎಂದು ಪ್ರಶ್ನಿಸಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಇದೇ ಮೇ 16ರಂದು ಮುಸ್ಲಿಮರು ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ. ಆ ಸಮಾವೇಶದಿಂದ ಹೆದರಿ ಈಗ ಹಿಜಾಬ್ಗೆ ಅನುಮತಿ ನೀಡಿದ್ದಾರೆ. 1 ವರ್ಗವನ್ನ ಸಮಾಧಾನ ಮಾಡೊದಕ್ಕೆ ಹಿಜಾಬ್ ನಿರ್ಧಾರ ಮಾಡಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇರುವಾಗ ರಾಜ್ಯ ಸರ್ಕಾರ ಈ ನಿರ್ಧಾರ ಮಾಡಿದ್ದು ಹೇಗೆ ಅನ್ನೋದು ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಏನು ಆಗುತ್ತದೆ ನೋಡೋಣ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರಕ್ಕೆ ಹುಚ್ಚು ಹಿಡಿದಿದೆ. ಸರ್ಕಾರದ ಪಾಪದ ಕೊಡವೂ ತುಂಬಿದೆ. ಯೋಗ್ಯತೆಗೆ ಆಡಳಿತ ನಡೆಸಲು ಸಾಧ್ಯವಾಗದೇ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಾ ಬರುತ್ತಿದೆ. ಶಾಲೆಗಳಲ್ಲಿ ಹಿಜಾಬ್ ಧರಿಸಲು ಅಧಿಕೃತ ಮುದ್ರೆ ಒತ್ತಿರುವುದು ಸರಿಯಲ್ಲ.. ಹಿಜಾಬ್ ವಿಚಾರ ಇನ್ನೂ ಕೋರ್ಟ್ನಲ್ಲಿದೆ ಎಂದಿದ್ದಾರೆ.

ಹಿಜಾಬ್ ಧರಿಸಲು ಅವಕಾಶ ನೀಡಿದ್ದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಯಾವ ಯಾವ ನಂಬಿಕೆ ಚಾಲ್ತಿಯಲ್ಲಿದೆ ಅದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕೇಸರಿ ಶಾಲು ಹಾಕಿಕೊಂಡು ಶಾಲೆಗೆ ಬರುವ ಹಾಗಿಲ್ಲ. ಜನಿವಾರ, ರುದ್ರಾಕ್ಷಿ, ಶಿವದಾರ, ಹಿಜಾಬ್ ಎಲ್ಲವನ್ನು ಹಾಕಿಕೊಂಡು ಬರಬಹುದು ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಸಚಿವ ಶಿವಾನಂದ ಪಾಟೀಲ್ ಕೂಡ ಪ್ರತಿಕ್ರಿಯಿಸಿದ್ದು, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ಹಿಜಾಬ್ಗೆ ಅವಕಾಶ ಕೊಟ್ಟ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಅಲ್ಪ ಸಂಖ್ಯಾತರನ್ನ ಕಡೆಗಣನೆ ಮಾಡ್ತಿದೆ. ನಾವು ಯಾವುದೇ ಒಂದು ಸಮುದಾಯದ ಪರವಾಗಿಲ್ಲ ಎಂದಿದ್ದಾರೆ.


