ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ರಾಜಕೀಯ ಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸುತ್ತಿರುವ ಸಂಸತ್ ಜಂಟಿ ಸದನ ಸಮಿತಿ ನಿನ್ನೆ ಬೆಂಗಳೂರಿನಲ್ಲಿ ಸಭೆ ನಡೆಸಿತು. ಸಂಸತ್ ಜಂಟಿ ಸದನ ಸಮಿತಿ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಪ್ರೊ.ರಾಜೀವ್ ಸೇರಿದಂತೆ ಹಲವರು ಭಾಗಿಯಾಗಿದ್ದರು. JPC ಅಧ್ಯಕ್ಷ ಪಿಪಿ. ಚೌಧರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ನಿಂದ ವೀರಪ್ಪ ಮೋಯಿಲಿ, ಬಿ.ಎಲ್.ಶಂಕರ್ ಹಾಗೂ ಜೆಡಿಎಸ್ನಿಂದ ತಿಪ್ಪೇಸ್ವಾಮಿ, ಎ.ಪಿ.ರಂಗನಾಥ್ ಕೂಡ ಭಾಗಿಯಾಗಿದ್ರು.

ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವಾಗಿ ಲೋಕಸಭೆ ಜಂಟಿ ಸದನ ಸಮಿತಿ ಅಧ್ಯಕ್ಷ ಪಿ.ಪಿ. ಚೌಧರಿ ಮಾತನಾಡಿ, ಒಂದು ರಾಷ್ಟ್ರ ಒಂದು ಚುನಾವಣೆ ದೇಶದ ಹಿತಕ್ಕಾಗಿ ಮಾಡಲಾಗ್ತಿದೆ. ಬೆಂಗಳೂರಿನಲ್ಲಿ ಸಭೆ ಮಾಡಿದೆವು. ರಾಜ್ಯದ ಡಿಸಿಎಂ, ಸಚಿವರು ಹಾಗೂ ವಿವಿಧ ಪ್ರಮುಖರು ಭಾಗವಹಿಸಿದ್ದರು. ಅವರ ಜೊತೆ ಚರ್ಚೆ ಮಾಡಿದೆವು. ಚರ್ಚೆ ವೇಳೆ ಅವರು ಅವರ ಅಭಿಪ್ರಾಯಗಳನ್ನ ತಿಳಿಸಿದ್ರು. ದೇಶಕ್ಕೆ ಒಂದೇ ಕಾಲದಲ್ಲಿ ಚುನಾವಣೆ ನಡೆಯದಿದ್ರೆ 7 ಲಕ್ಷ ಕೋಟಿಯ ಆರ್ಥಿಕ ಹೊರೆ ಆಗಲಿದೆ. ಚುನಾವಣೆ ಪ್ರಕ್ರಿಯೆ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.
ಎಲೆಕ್ಷನ್ ಕೆಲಸಕ್ಕೆ ಶಿಕ್ಷಕ ನೇಮಕ ಮಾಡುವುದು, ಪದೇ ಪದೇ ನಡೆಯುವುದರಿಂದ ಮಕ್ಕಳ ಕಲಿಕೆಗೆ ಹೊಡೆತ ಬೀಳಲಿದೆ. ಪ್ರತಿ ಬಾರಿ ಬೇರೆ ಬೇರೆ ಸಮಯದಲ್ಲಿ ಚುನಾವಣೆ ಆದರೆ ಆಯಾಯ ರಾಜ್ಯಕ್ಕೆ ಆರ್ಥಿಕ ಹೊಡೆತ ಉಂಟಾಗುತ್ತದೆ. ಇಂತಹ ಕೆಲ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಎಲ್ಲರೂ ಸೇರಿ ಇದನ್ನ ಪರಾಮರ್ಶೆ ಮಾಡಬೇಕು. ಮುಂದಿನ ಪೀಳಿಗೆಗೆ ನಾವು ಉತ್ತಮ ಮಾರ್ಗದರ್ಶನ ನೀಡಬೇಕಿದೆ ಎಂದಿರುವ ಚೌಧರಿ, ಆ ನಿಟ್ಟಿನಲ್ಲಿ ನಾವು ಹೆಜ್ಜೆ ಇಡಬೇಕಿದೆ ಎಂದಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣೆಗೆ ಡಿಸಿಎಂ ಶಿವಕುಮಾರ್ ವಿರೋಧ ಮಾಡಿರುವ ವಿಚಾರವಾಗಿ ಮಾತನಾಡಿ, ಎಲ್ಲರ ಜೊತೆ ಕುಳಿತು ಚರ್ಚೆ ಮಾಡುತ್ತೇವೆ. ಬಿಲ್ ಸರಿಯಾಗಿರಬೇಕು. ಯಾರೂ ವಿರೋಧ ಮಾಡಬಾರದು ಅಂತ ಲೋಕಸಭೆಯಲ್ಲಿ JPC ಕಮಿಟಿ ಮಾಡಲಾಗಿದೆ. ಸರ್ಕಾರ JPC ಕಮಿಟಿಗೆ ವಹಿಸಿದೆ. ಕಾಂಗ್ರೆಸ್ ಆಗಲಿ ಅಥವಾ ಬೇರೆಯವರಾಗಲಿ, ಕುಳಿತು ಚರ್ಚೆ ಮಾಡಿ ಒಮ್ಮತದ ನಿರ್ಧಾರಕ್ಕೆ ಬರಲಿದ್ದೇವೆ. ಲೋಕಸಭೆ, ವಿಧಾನಸಭೆ ಚುನಾವಣೆ ನಡೆದ ಬಳಿಕ ನೂರು ದಿನದ ಒಳಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಬೇಕು. ಇದು ರಾಮನಾಥ್ ಕೋವಿಂದ್ ಅವರ ಕಮಿಟಿ ಕೊಟ್ಟಿರೋ ವರದಿಯಲ್ಲಿದೆ. ಇದರಿಂದ ಸ್ಥಳೀಯ ಸಂಸ್ಥೆಗಳೂ ಒಂದೇ ಸಂದರ್ಭದಲ್ಲಿ ಚುನಾವಣೆ ಆದಂತೆ ಆಗಲಿದೆ ಎಂದಿದ್ದಾರೆ.


