ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಶಾಸಕ ಜಿ.ಡಿ ಹರೀಶ್ ಗೌಡ ಭಾಷಣ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ನಡೆಯುತ್ತಿದೆ. ನಾಳೆ ನಮ್ಮ ನೆಚ್ಚಿನ ನಾಯಕರು ಮಾಜಿ ಪ್ರಧಾನಿ ದೇವೇಗೌಡರ ಅಪ್ಪಾಜಿ ಹುಟ್ಟುಹಬ್ಬವಿದೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವತಿಯಿಂದ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ಅವರ ಮೇಲಿರಲಿ. ಮೈಸೂರು ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಕೇವಲ 5 ದಿನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಬರ್ತಾರೆ ಅಂತ ಕಾರ್ಯಕರ್ತರಲ್ಲಿ ಹೇಳಿದ್ವಿ, ಇಷ್ಟು ಜನಸಂಖ್ಯೆಯಲ್ಲಿ ಎಲ್ಲರೂ ಬಂದಿದ್ದಾರೆ. ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿಟಿ ದೇವೇಗೌಡ ಜನರಿಂದ ಜನತಾದಳ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಜಿಟಿ ದೇವೇಗೌಡ, ಮೊನ್ನೆಯಷ್ಟೇ ಮಾಜಿ ಪ್ರಧಾನಿ ದೇವೇಗೌಡ ಭೇಟಿಯಾಗಿ ಜೆಡಿಎಸ್ನಿಂದಲೇ 2028ಕ್ಕೆ ಸ್ಪರ್ಧೆ ಮಾಡ್ತೇನೆ ಎಂದಿದ್ದರು. ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಬಂದರು ಜಿಟಿ ದೇವೇಗೌಡ ಬಾರದೆ ಮುನಿಸು ಪ್ರದರ್ಶನ ಮಾಡಿದ್ದಾರೆ. ನನಗೆ ಯಾರೂ ಆಹ್ವಾನ ಕೊಟ್ಟಿಲ್ಲ. ಆಹ್ವಾನ ಕೊಟ್ಟರೆ ಹೋಗ್ತೇನೆ ಎಂದಿದ್ದರು. ಆದರೂ ಆಹ್ವಾನ ಬಾರದ ಹಿನ್ನೆಲೆಯಲ್ಲಿ ಜಿಟಿ ದೇವೇಗೌಡರು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.

ಮೈಸೂರಿನ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಇದು 72ನೇ ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮ. ಇದು ಮೈಸೂರು ಜಿಲ್ಲೆಯ ಕೊನೆ ಕಾರ್ಯಕ್ರಮ. ಚಾಮುಂಡೇಶ್ವರಿ ಕ್ಷೇತ್ರದ ಎಲ್ಲಾ ನಿಷ್ಠಾವಂತ ಕಾರ್ಯಕರ್ತರ ಬಂಧುಗಳಿಗೆ ಈ ಕಾರ್ಯಕ್ರಮದ ಯಶಸ್ಸು ಸಲ್ಲಬೇಕು. ಹಳ್ಳಿ ಹಳ್ಳಿಗಳಿಂದ ದೊಡ್ಡ ಸಂಖ್ಯೆಯಲ್ಲಿ ನೀವು ಬಂದಿದ್ದೀರಿ. 2023 ರ ಚುನಾವಣೆ ಬಳಿಕ ಜನತಾದಳ ಪಕ್ಷಕ್ಕೆ ಬಂದಿದ್ದು 19 ಸ್ಥಾನ. ಪಂಚರತ್ನ ಕಾರ್ಯಕ್ರಮಗಳ ಮೂಲಕ ಕುಮಾರಸ್ವಾಮಿ ಸಾಕಷ್ಟು ಪ್ರಯತ್ನ ಮಾಡಿದರು. ಅದಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ. ಜೆಡಿಎಸ್ ಕೇವಲ ಹಳೇ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸೀಮಿತ ಎಂದು ನಮ್ಮ ರಾಜಕೀಯ ವಿರೋಧಿಗಳು ಹೇಳುತ್ತಾರೆ. ಆದರೆ, ನಮ್ಮ ಪಕ್ಷ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಲ್ಲಾ ಕಡೆಯೂ ಇದೆ ಎಂದಿದ್ದಾರೆ.
ನಾವೆಲ್ಲರು ಒಂದು ಶಪತ ಮಾಡಬೇಕು. ಮುಂದಿನ ದಿನಗಳಲ್ಲಿ 11 ಕ್ಕೆ 11 NDA ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ರಾಜ್ಯದಲ್ಲಿ NDA ಸರ್ಕಾರ ರಚನೆ ಆಗಬೇಕು. ಇನ್ನು ಚುನಾವಣೆಗೆ ಉಳಿದಿರುವುದು ಕೇವಲ 700 ದಿನಗಳ ಮಾತ್ರ ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ. ನಾವು ಎನ್ಡಿಎ ಮಿತ್ರ ಕೂಟದಲ್ಲಿದ್ದೇವೆ. 2028 ರ ಚುನಾವಣೆ ಫಲಿತಾಂಶದ ಬಳಿಕ ಯಾರು ಸಿಎಂ ಆಗಬೇಕು ಎನ್ನುವುದನ್ನು ನಾನು ಈಗ ಹೇಳಲ್ಲ. ಕುಮಾರಸ್ವಾಮಿ ಅವರ ಅಲ್ಪಾವಧಿ ಸಿಎಂ ಆಗಿದ್ದಾಗ ಕೊಟ್ಟ ಆಡಳಿತ ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ಸಿಎಂ ಕುರ್ಚಿ ಮುಖ್ಯ ಅಲ್ಲ, ನಾಡಿನ ಅಭಿವೃದ್ಧಿ ಮುಖ್ಯ ಎಂದು ಕುಮಾರಸ್ವಾಮಿ ಹೇಳ್ತಾ ಇರುತ್ತಾರೆ. ಬಹಳ ಜನರನ್ನು ಈ ಕ್ಷೇತ್ರದಿಂದ ಬೆಳೆಸಿದ್ದೀರಿ. ಸಾಮಾಜಿಕ ನ್ಯಾಯದೊಂದಿಗೆ ನಮ್ಮ ಪಕ್ಷ ರಾಜಕೀಯ ಮಾಡುತ್ತಿದೆ. ಎಲ್ಲಾ ವರ್ಗದವರಿಗೂ ಎಲ್ಲಾ ಸ್ಥಾನ ಮಾನ ಕೊಟ್ಟಿದೆ ಎಂದಿದ್ದಾರೆ.

ಕುಮಾರಸ್ವಾಮಿಗೆ ಕರಿಯ ಕಂಬಳಿ ಹೊದಿಸಿ ಬಂಡೂರು ಕುರಿ ಉಡುಗೊರೆ ನೀಡಿದ್ದಾರೆ ಜೆಡಿಎಸ್ ಕುರುಬ ಸಮುದಾಯದ ಅಭಿಮಾನಿಗಳು ಮತ್ತು ಕಾರ್ಯಕರ್ತರು. ಈ ವೇಳೆ ಮಾತಗನಾಡಿದ ಕುಮಾರಸ್ವಾಮಿ, ನನಗೆ ನಿಜವಾಗಲೂ ಶಕ್ತಿ ತುಂಬಿರೋದು ನೀವು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಉದ್ಬೂರು, ರಮ್ಮನಹಳ್ಳಿ ಜನರನ್ನು ನೆನಪಿಸಿಕೊಳ್ಳಬೇಕು. ಕೊನೆ ಉಸಿರು ಇರುವ ತನಕ ಚಾಮುಂಡೇಶ್ವರಿ ಕ್ಷೇತ್ರದ ಜನರನ್ನು ಮರೆಯಲ್ಲ. 2006 ರ ಉಪಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ತಪ್ಪಾಯ್ತು. ನಮ್ಮ ತಪ್ಪಿನಿಂದ ನಮಗೆ ಸೋಲಾಯಿತು. ನಮ್ಮಲ್ಲಿನ ಕೆಲವರು ಮೈ ಮರೆತರು. ಅದಕ್ಕಾಗಿ ಇಂದು ಕರ್ನಾಟಕ ಇಂತಹ ಪರಿಸ್ಥಿತಿಗೆ ತಲುಪಿದೆ ಎನ್ನುವ ಮೂಲಕ ಪರೋಕ್ಷವಾಗಿ 2006ರ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವಿನ ಕೆಲವರು ಕಾರಣ ಆಗಿದ್ದಾರೆ ಎಂದು ಕುಟುಕಿದ್ದಾರೆ.
ನಮ್ಮ ಕುರುಬ ಸಮಾಜ ಬಂಧುಗಳು ನನ್ನ ತಲೆಗೆ ರುಮಾಲು ಪೇಟೆ ಹಾಕಿದ್ದಾರೆ. ಈ ಮೂಲಕ ಕುರುಬ ಸಮುದಾಯ ಒಂದೇ ಪಕ್ಷಕ್ಕೆ ಗುತ್ತಿಗೆ ಕೊಟ್ಟಿಲ್ಲ ಅನ್ನೋದು ರಾಜ್ಯದ ಜನರಿಗೆ ಗೊತ್ತಾಗುವಂತೆ ಮಾಡಿದ್ದಾರೆ. ನಾನು ಯಾವುದೇ ಪೇಟ ಹಾಕೋದಿಲ್ಲ. ಆದ್ರೆ ಈ ಸಂದೇಶ ಹೋಗಲಿ ಅಂತಾನೆ ಖುಷಿ ಇಂದ ಪೇಟ ಧರಿಸಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಕುರುಬ ಸಮುದಾಯ ಬೆಂಬಲ ನಮಗೂ ಇದೆ ಎಂದಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಜನರು ನೆಮ್ಮದಿಯಿಂದ ಇದ್ದಾರೆಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಕಾಂಗ್ರೆಸ್ ನಾಯಕರು ಪ್ರತಿದಿನ ನನ್ನ ಮನೆಯ ಬಳಿ ಬಂದು ನೋಡಿದರೆ ಜನರ ಸ್ಥಿತಿ ಏನಾಗಿದೆ ಎಂದು ಮನವರಿಕೆ ಆಗಲಿದೆ ಎಂದಿರುವ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 75 ಕ್ಷೇತ್ರಗಳಲ್ಲಿ ಜಯಗಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2028 ರ ಚುನಾವಣೆಯಲ್ಲೂ ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ. ಕಾರ್ಯಕರ್ತರ ಭಾವನೆಗಳಿಗೆ ಬೆಲೆಕೊಟ್ಟು ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂದು ಮನವರಿಕೆ ಮಾಡಿಕೊಡಲು ಸಮಾವೇಶ ಮಾಡಿದ್ದೇವೆ ಎಂದಿದ್ದಾರೆ.


